ಸುಮಾರು ೧೫೦ ವರ್ಷಗಳ ಹಿಂದಿನ ಘಟನೆ .ಊರಲ್ಲಿ ಒಬ್ಬ ಹಿರಿಯರು ತನಗೆ ಎದೆನೋವು ಇದೆ ಎಂದು ತಮ್ಮ ಆಪ್ತ ಬಳಗದಲ್ಲಿ ಹೇಳಿಕೊಂಡು ಓಡಾಡುತ್ತಿದ್ದರಂತೆ .
ಆ ಕಾಲದಲ್ಲಿ ವೈದ್ಯರು ಹಳ್ಳಿಗಳಲ್ಲಿ ಎಲ್ಲೂ ಕಾಣಸಿಗದ ದೇವರುಗಳು.
ಹಿರಿಯರ ಎದೆ ನೋವು ಊರಲ್ಲಿ ಒಂದು ಬಿಡಿಸಲಾರದ ಒಗಟಿನಂತಾಗಿತ್ತು .
ಹಗಲು ರಾತ್ರಿ ದುಡಿಯುವ ಬಿರುಸಿನ ಆಳು ಒಂದೊಂದು ಸಾರಿ ನೋವು ಎಂದಕೂಡಲೇ ಬಹಳ ಮಂದಿಗೆ ನಂಬಲಾರದ ಅಳಲು ಆಗಿತ್ತು !.
ನಾಟಿ ವೈದ್ಯರಾದರು !
ದೇವರು ದಿಂಡಿರು ಆಯ್ತು !
ಮಾಟ ಮಂತ್ರವಾಯಿತು !
ಆ ಎಂಟೆದೆ ಬಂಟನ ಎದೆ ನೋವು ಮಾತ್ರ ಅವಾಗ್ ಅವಾಗ್ ಬಂದು ಹೋಗುದು ತಪ್ಪಲಿಲ್ಲ .
ಹಿರಯರ ಬದುಕುವ ಬಗೇನೇ ರೋಚಕ . ಒಂದು ದಿನ ಹಿರಿಯರು ಹಳ್ಳದ ಪಕ್ಕದಲ್ಲಿ ಮಲಗಿದ್ದರಂತೆ . ರಾತ್ರಿ ಹೊತ್ತು ಸುರಿದ ಮಳೆಗೆ ಹಾಸಿಗೆ ಸಮೇತ ಹಳ್ಳದಲ್ಲಿ
ಕೊಚ್ಚಿಕೊಂಡು ದೂರದ ಜಾಗದಲ್ಲಿ ಹಾಸಿಗೆ ಸುತ್ತಿಕೊಂಡು ಬಿದ್ದಿದ್ದರಂತೆ .ಅವರನ್ನ ಗುರುತಿಸಿ ಆಪ್ತರು , ಸ್ನೇಹಿತರು ಗೋಳೊವೆಂದು ಅಳುತ್ತ ಆಕಡೆ ಯಿಕಡೆ ತಳ್ಳಿ ನಮ್ಮನ್ನ ಬಿಟ್ಟು ಹೋದನೆಂದು ಕಿರುಚಿದರಂತೆ .ಅವರ ತಳ್ಳಾಟಕ್ಕೆ ಎಚ್ಚೆತ್ತು " ಯೇ ನಿಮ್ಮೌನ ನಾ ಸತ್ತಿಲ್ಲರೋ " ಅಂದ್ರಂತೆ .
ಕೊಚ್ಚಿಕೊಂಡು ಹೋದ್ರು ನಿದ್ರಾದೇವತೆ ಬಿಡಲಿಲ್ಲ ನಮ್ಮ ಹಿರಿಯರನ್ನ .
ಒಂದು ದಿನ ಊರಲ್ಲಿನ ನಿಪುಣರು ಒಂದೆಡೆ ಸೇರಿ ಹಿರಿಯರ ಎದೆ ನೋವಿನ ಮೂಲ ಹುಡುಕಲು ಸಿದ್ದರಾದರಂತೆ . ಅವರಲ್ಲಿ
ಒಬ್ಬರು " ಹಿರಿಯರೇ ಅಂಗಿಯನ್ನ ಬಿಚ್ಚಿ "
ದುರುಗುಡಸಿ ಎದೆಯನ್ನ ನೋಡುತ್ತಾ ಹೇಳಿದರು .
ಅಂಗಿಯನ್ನ ಬಿಸಾಡುತ್ತಿದ್ದಂತೆ ನೆರೆದವರಿಗೆ
ಒಂದು ಕಾಡು ನೋಡಿದಷ್ಟು ಎದೆಯಮೇಲೆ ದಟ್ಟವಾದ ಅಡ್ಡ ದಿಡ್ಡಿಯಾಗಿ ಕೂದಲು ಬೆಳೆದು ಹೊರಳಿತ್ತು .
ಕಾವು ಕೊಟ್ಟು ಎದೆಯನ್ನ ಬಿಸಿ ಮಾಡಿದರೆ ಸ್ವಲ್ಪ ಸಮಾಧಾನ ಸಿಕ್ಕರೂ ಸಿಗಬಹುದು ಅನ್ನುತ ಲೆಕ್ಕಾಚಾರ ಹಾಕಿ ನಿಂತವರಲೊಬ್ಬರು ಮುಂದಾದರು .
ಕಾವೂ ಕೊಟ್ಟ ಕ್ಷಣ ಮಾತ್ರದಲ್ಲಿ ಕೂದಲುಗಳಲ್ಲಿ ಮನೆಮಾಡಿಕೊಂಡಿರುವ ಚೇಳುಗಳು ಬುದು - ಬುದು ಹೊರಗಡೆ ಬಂದವು .
ಯಾವ ರೋಗುನು ಇಲ್ಲ ಕಾಯಿಲೇನು ಇಲ್ಲ . ಚೇಳುಗಳ ಕಡಿತಕ್ಕೆ ನೋವು ಬಂದಿದೆ ಅನ್ನುವ ಸಂಗತಿ ತಿಳಿದು ನೆರೆದವರು ಹೌ ಹಾರಿದರು .
ಎದೆಯ ಮೇಲೆ ಜಿಡ್ಡುಗಟ್ಟಿದ ಕೂದಲುಗಳನ್ನೇ ಮನೆಮಾಡಿ ಆವಾಗ್ ಇವಾಗ್ ಕಚ್ಚುತಾ ಹಿರಿಯರನ್ನ ಗೋಳಿಟ್ಟ ಚೇಳುಗಳಿಗೆ ಚಪ್ಪಲಿನ ಏಟು ಕೊಡಲಾಯಿತು .
ಹಿರಿಯರು ಅಂದ್ರು ಅಂದಿರಬಹುದು
"ಉಂಡ ಮನೆಗೆ ಕಣ್ಣು ಹಾಕಿದ ಚೇಳುಗಳೇ !!??"